ಬಗೆಹರಿದ ‘ಲವ್ ಮಾಕ್ಟೇಲ್ 3’ ಕಥೆಯ ವಿವಾದ, ಕೈಕುಲುಕಿದ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ

ಸ್ಯಾಂಡಲ್‌ವುಡ್‌ನ ಯಶಸ್ವಿ ಸರಣಿ ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆಗೆ ಸಂಬಂಧಿಸಿದಂತೆ ಮೂಡಿದ್ದ ಸಣ್ಣದೊಂದು ವಿರಸ ಈಗ ಸುಖಾಂತ್ಯ ಕಂಡಿದೆ. ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ.

ಈ ವಿವಾದದ ಎಳೆಯನ್ನು ಮೊಟ್ಟಮೊದಲ ಬಾರಿಗೆ ಸಾರ್ವಜನಿಕರ ಗಮನಕ್ಕೆ ತಂದಿದ್ದು ‘ಸಿನಿಬಜ್’. ಚಿತ್ರದ ಕಥೆಯ ಹಕ್ಕು ಮತ್ತು ಕ್ರಿಯೇಟಿವ್ ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಸಿನಿಬಜ್ ವರದಿ ಮಾಡಿದ ಬೆನ್ನಲ್ಲೇ, ಈ ವಿಷಯ ಚಿತ್ರರಂಗದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು. 2023ರ ಸಮಯದಲ್ಲಿ ನಡೆದ ಕಥಾ ಚರ್ಚೆಗಳಿಗೂ ಮತ್ತು ಈಗ ತೆರೆಯ ಮೇಲೆ ಬಂದಿರುವ ಚಿತ್ರಕ್ಕೂ ಸಾಮ್ಯತೆ ಇದೆ ಎಂಬ ವಿಚಾರವು ಉಭಯ ತಂಡಗಳ ನಡುವೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತ್ತು.

ವಿವಾದವು ವೈಯಕ್ತಿಕ ಘರ್ಷಣೆಯತ್ತ ತಿರುಗುವ ಮುನ್ನವೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿತು. ಮಂಡಳಿಯ ಅಧ್ಯಕ್ಷೆ ಜಯಮಾಲಾ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ ಕೆ ವಿಶ್ವನಾಥ್‌, ಕೆ.ವಿ. ಚಂದ್ರಶೇಖರ್‌, ಎ. ಗಣೇಶ್‌, ರಮೇಶ್‌ ಯಾದವ್ ಮತ್ತು ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಉಭಯ ಕಡೆಯವರೂ ಮುಕ್ತವಾಗಿ ಮಾತನಾಡಿದರು. ಕಥೆಯ ಎಳೆಗಳಲ್ಲಿ ಕಂಡುಬಂದ ಸಾಮ್ಯತೆಯು ಉದ್ದೇಶಪೂರ್ವಕವಲ್ಲದ ಕೇವಲ ಕಾಕತಾಳೀಯ ಮತ್ತು ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ಪರಸ್ಪರ ಒಪ್ಪಿಕೊಂಡಿದ್ದಾರೆ. ಚಿತ್ರರಂಗ ಎಂಬುದು ಒಂದು ಕುಟುಂಬದಂತಿದ್ದು, ಇಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂಬ ಹಿರಿಯರ ಮಾತಿಗೆ ಗೌರವ ನೀಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಮುಕ್ತಾಯಗೊಳಿಸಲು ಇಬ್ಬರೂ ಒಮ್ಮತ ವ್ಯಕ್ತಪಡಿಸಿದ್ದಾರೆ.

ಸಿನಿಬಜ್‌ ನೀಡಿದ ವರದಿಯು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದ್ದರಿಂದಲೇ, ಇಂದು ಈ ವಿವಾದವು ತಾರ್ಕಿಕ ಮತ್ತು ಸಕಾರಾತ್ಮಕ ಅಂತ್ಯವನ್ನು ಕಾಣುವಂತಾಗಿದೆ. ಗುರು ದೇಶಪಾಂಡೆ ತಂಡವು ತಮ್ಮ ದೂರನ್ನು ಹಿಂಪಡೆದರೆ, ಡಾರ್ಲಿಂಗ್ ಕೃಷ್ಣ ಅವರು ಕೂಡ ಪ್ರಕರಣವನ್ನು ಕಾನೂನು ಮಟ್ಟಕ್ಕೆ ಕೊಂಡೊಯ್ಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಒಟ್ಟಿನಲ್ಲಿ, ‘ಲವ್ ಮಾಕ್ಟೇಲ್ 3’ ಚಿತ್ರವು ಈಗ ಯಾವುದೇ ವಿವಾದದ ನೆರಳಿಲ್ಲದೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರರಂಗದ ಇಬ್ಬರು ಪ್ರತಿಭಾವಂತರು ವಿವಾದವನ್ನು ಬದಿಗಿಟ್ಟು ಕೈಕುಲುಕಿರುವುದು ಸ್ಯಾಂಡಲ್‌ವುಡ್‌ನಲ್ಲಿ ಸೌಹಾರ್ದತೆಯ ಹೊಸ ಸಂದೇಶ ರವಾನಿಸಿದ್ದಾರೆ

support our advertisers
Scroll to Top